ಯಕ್ಷಗಾನ ಕಲಿಕೆಗೆ ಇಂಗ್ಲೀಷ್ ಅನುವಾದಿತ ಸಾಹಿತ್ಯದ ಕೊರತೆ - ಡಾ| ಬಿ.ಎ. ವಿವೇಕ ರೈ
ಲೇಖಕರು : ಉದಯವಾಣಿ
ಭಾನುವಾರ, ಜುಲೈ 7 , 2013
|
ಸುರತ್ಕಲ್: ಯಕ್ಷಗಾನ ಕಲೆ ರಾಜ್ಯದಲ್ಲಿ ಮೇಲ್ಮಟ್ಟದ ಪ್ರಸಿದ್ಧಿ ಹೊಂದಿದ್ದರೂ ದೇಶ ಹಾಗೂ ವಿದೇಶಗಳಲ್ಲಿ ಯಕ್ಷಗಾನ ಒಂದು ಐಚ್ಚಿಕ ವಿಷಯವಾಗಿ ಕಲಿಯುವವರಿಗೆ ಬೇಕಾದ ಇಂಗ್ಲೀಷ್ ಅನುವಾದಿತ ಸಾಹಿತ್ಯದ ಕೊರತೆಯಿದೆ. ಇದನ್ನು ಸರಿದೂಗಿಸಲು ಯಕ್ಷಗಾನ ಕ್ಷೇತ್ರದ ದಿಗ್ಗಜರು, ಖ್ಯಾತ ಬರಹಗಾರರು ಮುಂದಾಗಬೇಕು ಎಂದು ಹಂಪಿ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ, ಸಂಶೋಧಕ ಡಾ| ಬಿ.ಎ. ವಿವೇಕ ರೈ ಹೇಳಿದರು.
ಸುರತ್ಕಲ್ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಶುಕ್ರವಾರ ಮುದ್ದಣ ಪ್ರಕಾಶನ ನಂದಳಿಕೆ ಇದರ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ಮುದ್ದಣ ಪ್ರಶಸ್ತಿಯನ್ನು ಈ ಬಾರಿ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ, ಕಲಾವಿದ ಅಂಬಾತನಯ ಮುದ್ರಾಡಿ ಹಾಗೂ ಯಕ್ಷಗಾನ ಕಲಾವಿದ ಸಂಶೋದಕ ಡಾ| ಪ್ರಭಾಕರ ಜೋಶಿ ಅವರಿಗೆ ಪ್ರಧಾನ ಮಾಡಿ ಅವರು ಮಾತನಾಡಿದರು.
|
ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ, ಕಲಾವಿದ ಅಂಬಾತನಯ ಮುದ್ರಾಡಿ ಹಾಗೂ ಯಕ್ಷಗಾನ ಕಲಾವಿದ ಸಂಶೋದಕ ಡಾ| ಪ್ರಭಾಕರ ಜೋಶಿ ಅವರಿಗೆ, ಮುದ್ದಣ ಪ್ರಕಾಶನ ನಂದಳಿಕೆ ಇದರ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ಮುದ್ದಣ ಪ್ರಶಸ್ತಿ ಪ್ರಧಾನ
|
ಯಕ್ಷಗಾನ ರಂಗದ ದಿಗ್ಗಜ, ಸಂಶೋಧಕ ಡಾ| ಪ್ರಭಾಕರ ಜೋಶಿ ಮಾಡಿದ ಸಂಶೋಧನೆ, ಬರೆದ ಸಾಹಿತ್ಯ ಗುತ್ಛಗಳನ್ನು ಇಂಗ್ಲೀಷ್ ಭಾಷೆಗೂ ತರ್ಜುಮೆ ಮಾಡಿ ಯಕ್ಷಗಾನವನ್ನು ದೇಶವಿದೇಶ ಮಟ್ಟದಲ್ಲಿ ಅಕಾಡೆಮಿಕ್ ಮಾನ್ಯತೆ ದೊರಕಿಸಲು ಮುಂದಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ದ.ಕ. ಜಿಲ್ಲೆ ಮೌಖೀಕ ಹಾಗೂ ಲಿಖೀತ ಸಾಹಿತ್ಯ ಸಂಪತ್ತನ್ನು ಒಟ್ಟು ಮಾಡಿ ಬೆಳೆಸುವ ಮೂಲಕ ಸಾಹಿತ್ಯ ಕಂಪನ್ನು ಪಸರಿಸುವಲ್ಲಿ ಪ್ರಧಾನ ಪಾತ್ರ ವಹಿಸಿದೆ. ಈ ನಿಟ್ಟಿನಲ್ಲಿ ಕವಿ, ಸಾಹಿತಿ ಮುದ್ದಣ ನಿಧನರಾಗಿ ಮೂವತ್ತೂಂದು ವರ್ಷವಾದರೂ ಅವರು ಯಕ್ಷಗಾನ ರಂಗಕ್ಕೆ, ಸಾಹಿತ್ಯಕ್ಕೆ ನೀಡಿದ ಕೊಡುಗೆ ಅದ್ಭುತ ಎಂದು ಬಣ್ಣಿಸಿದರು.
ಸಮಾಜದಲ್ಲಿ ಇಂದು ಉದ್ಯೋಗಕ್ಕಾಗಿ ಒಂದು ವೃತ್ತಿಪರ ಶಿಕ್ಷಣ ಪಡೆದ ಮಾತ್ರಕ್ಕೆ ಆತ ಅ ವೃತ್ತಿಯಲ್ಲಿ ಮಾತ್ರ ತೊಡಗಿಸಿಕೊಳ್ಳಬೇಕು ಎಂಬ ತಪ್ಪು ಕಲ್ಪನೆ ತುಂಬಿಬಿಟ್ಟಿದೆ. ನಿಜವಾಗಿ ನೋಡುವುದಾದರೆ ಸಾಹಿತ್ಯ, ಇನ್ನಿತರ ಕಲೆಗಳ ಬೆಳವಣಿಗೆಗೆ ಆಸಕ್ತ ವರ್ಗವೇ ತೊಡಗಿಸಿಕೊಂಡು ಹೆಚ್ಚು ಹೆಚ್ಚು ಬೆಳೆಸಿದೆ ಎಂದು ಅಭಿಪ್ರಾಯಪಟ್ಟರು.
ಡಾ| ಪ್ರಭಾಕರ ಜೋಶಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯನ್ಮಾನ ಮಾಧ್ಯಮಗಳಲ್ಲಿ ಹೆಚ್ಚುತ್ತಿರುವ ಲೈಂಗಿಕ ಮನೋವೃತ್ತಿಯ ಮನೋರಂಜನೆ ನಡುವೆ ಸಾತ್ವಿಕ ಜೀವಂತಕಲೆ ಉಳಿಸಿ ಬೆಳೆಸಲು ಚಿಂತಿಸಬೇಕಾದ ಕಾಲ ಬಂದಿದೆ. ಯಕ್ಷಗಾನ ರಂಗಕ್ಕೆ ಹೊಸಹೊಸ ಮುಖಗಳು ಪಾದಾರ್ಪಣೆಗೈಯುತ್ತಿರುವುದು ಸಂತಸದ ವಿಚಾರ ಎಂದರು.
ಅಂಬಾತನಯ ಮುದ್ರಾಡಿ ಮುದ್ದಣ ಪ್ರಶಸ್ತಿ ನೀಡಿ ಗೌರವ ಅರ್ಪಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉಪಸ್ಥಿತರಿದ್ದರು. ಜಾನಪದ ವಿದ್ವಾಂಸ, ಹಿರಿಯ ಪತ್ರಕರ್ತ ಕೆ.ಎಲ್. ಕುಂಡಂತಾಯ ಅಭಿನಂದನಾ ಭಾಷಣಗೈದರು. ಹಲವಾರು ವರ್ಷಗಳಿಂದ ಪ್ರತಿಷ್ಠಿತ ಮುದ್ದಣ ಪ್ರಶಸ್ತಿ ನೀಡುತ್ತಾ ಬಂದಿರುವ ಮುದ್ದಣ ಪ್ರಕಾಶನ ನಂದಳಿಕೆ ಇದರ ನಿರ್ದೇಶಕ ಬಾಲಚಂದ್ರ ರಾವ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪಿ.ವಿ. ರಾವ್ ನಿರೂಪಿಸಿದರು. ಸೌಜನ್ಯ ವಂದಿಸಿದರು.
ಜ್ಞಾನಪೀಠ, ಬೂಕರ್ಗಳಂತಹ ಪ್ರಶಸ್ತಿಗಳು ಬೃಹತ್ ಮೊತ್ತ ಹೊಂದಿರುವುದರಿಂದ ದೊಡ್ಡ ಪ್ರಶಸ್ತಿಗಳು ಎಂದು ಬಿಂಬಿಸಲ್ಪಡುತ್ತಿವೆ. ಇವುಗಳ ಹಿಂದೆ ಉದ್ಯಮ ರಂಗದ ಹಸ್ತಕ್ಷೇಪವೂ ಇಲ್ಲದಿಲ್ಲ. ಬೃಹತ್ ನಿಧಿಗಂಟು ಹೊಂದಿದ ಪ್ರಶಸ್ತಿಗಳಿಗಿಂತ ಅರ್ಥಪೂರ್ಣವಾದ ಮುದ್ದಣ ಪ್ರಶಸ್ತಿ ಹೆಚ್ಚು ತೂಕವುಳ್ಳದ್ದಾಗಿದೆ
ಕೃಪೆ : http://www.udayavani.com
|
|
|